ಭಾನುವಾರ, ನವೆಂಬರ್ 25, 2018

ಕನ್ನಡ ರಾಜ್ಯೋತ್ಸವ @ ವಿಎಂವೇರ್ - 2018

ವಿಎಂವೇರ್ ಸಂಸ್ಥೆಯ ಅದ್ಧೂರಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ - 2018

 

 ಅಮೇರಿಕಾ ಮೂಲದ ಸುಪ್ರಸಿದ್ದ ಸಾಫ್ಟ್ ವೇರ್ ಕಂಪನಿ ವಿಎಂವೇರ್ ನ ಉದ್ಯೋಗಿಗಳು ಬೆಂಗಳೂರು ಜೆಪಿನಗರದ ತಮ್ಮ ಕಛೇರಿಯಲ್ಲಿ  ದಿನಾಂಕ ೧೬ ನವೆಂಬರ್ ೨೦೧೮ ಶುಕ್ರವಾರದಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.




ಈ ವರ್ಷದ ಆಚರಣೆಯನ್ನು ಮಹಿಳಾ ಪ್ರಧಾನವಾಗಿರಿಸಬೇಕೆಂದು ಕನ್ನಡರಾಜ್ಯೋತ್ಸವ ಸಮಿತಿಯ ಉದ್ದೇಶವಾಗಿತ್ತು. ಅದಕ್ಕಾಗಿಯೇ ಮುಖ್ಯ ಅತಿಥಿಯಾಗಿ ಪದ್ಮಶ್ರೀ ಪುರಸ್ಕೃತ ಶ್ರೀಮತಿ ಸುಕ್ರಿ ಬೊಮ್ಮಗೌಡ ಅವರನ್ನು ಆಹ್ವಾನಿಸಲಾಗಿತ್ತು.  ಅದೂ ಅಲ್ಲದೇ ೫೦ ಮಹಿಳಾ ಜನಪದ ಕಲಾವಿದರನ್ನು ಜನಪದ ನೃತ್ಯಗಳ (ಡೊಳ್ಳು ಕುಣಿತ, ವೀರಗಾಸೆ, ನಂದಿಕೋಲು, ಫೂಜ/ಪಟ ಕುಣಿತ, ಕಂಸಾಳೆ) ಮೆರವಣಿಗೆ ನಡೆಸಿಕೊಡಲು ಆಹ್ವಾನಿಸಲಾಗಿತ್ತು.


ಶ್ರೀಮತಿ ಸುಕ್ರಜ್ಜಿಯವರು ಕನ್ನಡ ಜನಪದ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರ ಮತ್ತು ಅವರು ಸಮಸ್ತ ಕನ್ನಡನಾಡಿಗೆ ಹೆಮ್ಮೆ. ಶ್ರೀಮತಿ ಸುಕ್ರಿ ಅವರು ಜಾನಪದ ಹಾಡುಗಳ ಕಣಜ, ಬತ್ತದ ಗೀತ ಕಾರಂಜಿ. ಪರಂಪರಾಗತ ಜ್ಞಾನ ಹಾಗೂ ಪ್ರತಿಭಾಶಕ್ತಿಯನ್ನು ಮೈಗೂಡಿಸಿಕೊಂಡು ಜಾನಪದ ಕ್ಷೇತ್ರದಲ್ಲಿ ಅರಳಿದ ಕಾನನ ಕುಸುಮ. ತಮ್ಮದೇ ಆದ ತಂಡ ಕಟ್ಟಿ ಸಂಗಡಿಗರಿಗೆ ಪ್ರಾಚೀನ ಕುಣಿತ ತಾರ್ಲೆ, ಬಿದರಂಡೆ ಕಲೆಗಳನ್ನು ಕಲಿಸುತ್ತಾ ಅವರಿಗೆ ಜಾನಪದ ಧೀಕ್ಷೆ ನೀಡಿ ಅವರನ್ನು ಬೆಳೆಸುತ್ತಾ ಬಂದಿರುವ ಮಹಾನ್ ಕಲಾವಿದೆ. ಸುಕ್ರಿ ಅವರು ಅಪಾರ ಸಾಮಾಜಿಕ ಎಚ್ಚರ ಹಾಗೂ ಕಳಕಳಿಯುಳ್ಳವರು. ಮದ್ಯಪಾನದ ಪಿಡುಗಿನ ವಿರುದ್ಧ ಸಮರವನ್ನೇ ಸಾರಿದ ಧೀರ ವನಿತೆ. ಬುಡಕಟ್ಟು ಜನಾಂಗದ ಬಗ್ಗೆ ಅವರ ಆಳವಾದ ಚಿಂತನೆ ಹಾಗೂ ಒಳನೋಟಗಳು ಬೆರಗು ಹುಟ್ಟಿಸುತ್ತವೆ. ಪರಂಪರಾಗತವಾಗಿ ಬಂದಿರುವ ನಾಟಿ ವೈದ್ಯ ಪದ್ಧತಿಯನ್ನು ಉಳಿಸಿಕೊಡು ಬಂದಿರುವವರು ಶ್ರೀಮತಿ ಸುಕ್ರಿ. ಜಾನಪದ ಕಾವ್ಯಗಳಿಗೆ ತಮ್ಮ ಹಾಡುಗಾರಿಕೆಯಿಂದ ಜೀವ ತುಂಬುವ ಸುಕ್ರಿ ಅವರು ನಾಡಿನಾದ್ಯಂತ ಸಭೆ ಸಮಾರಂಭಗಳಲ್ಲಿ, ಆಕಾಶವಾಣಿ - ದೂರದರ್ಶನಗಳಲ್ಲಿ ಹಾಡಿ ಜನಮೆಚ್ಚುಗೆ ಗಳಿಸಿರುವ ಪ್ರತಿಭಾನ್ವಿತೆ.  ಭಾರತ ಸರಕಾರದಿಂದ ”ಪದ್ಮಶ್ರೀ” ಪ್ರಶಸ್ತಿಯನ್ನು, ಕರ್ನಾಟಕ ರಾಜ್ಯ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಮುಖ್ಯಮಂತ್ರಿಗಳ ಬಂಗಾರದ ಪದಕ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿಗಳ ಸರಮಾಲೆ ಶ್ರೀಮತಿ ಸುಕ್ರಿಯವರ ಮುಡಿಗೇರಿದೆ. ಈ ಎಲ್ಲಾ ಪ್ರಶಸ್ತಿಗಳಿಂದ ಉತ್ತರಕನ್ನಡ ಜಿಲ್ಲೆಯಷ್ಟೆ ಅಲ್ಲ ಕರ್ನಾಟಕ ರಾಜ್ಯವು ಅತೀವ ಹೆಮ್ಮೆಯಿಂದ ಬೀಗುವಂತೆ ಮಾಡಿದ್ದಾರೆ.

ಅವರನ್ನು ಬಹಳ ಹೆಮ್ಮೆಯಿಂದ, ವಿಜ್ರಂಭಣೆಯಿಂದ ಐವತ್ತಕ್ಕೂ ಮೀರಿ ಜನಪದ ಕಲಾವಿದರ ಕುಣಿತದೊಂದಿಗೆ ನೂರಾರು ವಿಎಂವೇರ್ ಉಧ್ಯೋಗಿಗಳು ಮೆರವಣಿಗೆಯಲ್ಲಿ ಕಚೇರಿಗೆ ಬಹಳ ಹರ್ಷೋಲ್ಲಾಸದಿಂದ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಕನ್ನಡ ಕಲಾವಿದರನ್ನೊಳಗೊಂಡು ಸುಕ್ರಜ್ಜಿ ಆಸೀನರಾಗಿದ್ದ ರಾಜರಥ ಮೆರವಣಿಗೆಯ ಕೇಂದ್ರಬಿಂದುವಾಗಿತ್ತು.


ರಥದ ಮುಂಬಾಗದಲ್ಲಿ ಮಹಿಳಾ ಡೊಳ್ಳು ಕುಣಿತ, ಮಹಿಳಾ ಕಂಸಾಳೆ, ಮಹಿಳಾ ವೀರಗಾಸೆ, ಮಹಿಳಾ ನಂದಿಕೋಲು, ಮಹಿಳಾ ಪಟ ಕುಣಿತ ಮತ್ತು ಭರತನಾಟ್ಯ ತಂಡಗಳು ಕಣ್ಮನ ಸೆಳೆಯುತ್ತಿತ್ತು. ಬೆಳಿಗ್ಗೆ ೧೦ ಗಂಟೆಗೆ ಆರಂಭವಾದ ಈ ಮೆರವಣಿಗೆ ಜೆಪಿನಗರದ ಡಾಲರ್ಸ್ ಕಾಲನಿಯಲ್ಲಿ ಕನ್ನಡ ಜನಪದ ಸೊಗಡಿನ ಹೂಮಳೆ ಸುರಿಸಿತು.



ಕಛೇರಿಯ ಮುಂಬಾಗ ನೂರಾರು ಉದ್ಯೋಗಿಗಳೆದುರು Colors ಕನ್ನಡ ಕೋಗಿಲೆ ಪ್ರಸಿದ್ಧಿ ಪಡೆದ ಅನೀಶ್ ರಾವ್ ಅವರು ತಮ್ಮ ಸಿರಿಕಂಠದಲ್ಲಿ ಗಂದದಗುಡಿ ಹಾಡನ್ನು ಹಾಡಿ ಕನ್ನಡಿಗರ ಕಿಚ್ಚನ್ನು ಹೆಚ್ಚಿಸಿದರು. ಅದಾದ ಬಳಿಕ ಜನಪದ ಮತ್ತು ರಂಗಕರ್ಮಿ ಶ್ರೀ ನಾಗರಾಜ ಮೂರ್ತಿ ಅವರ ನೇತ್ರತ್ವದಲ್ಲಿ ಜನಪದ, ಭರತನಾಟ್ಯಗಳ ಜುಗಲ್ಬಂದಿ ನೃತ್ಯ ಕಾರ್ಯಕ್ರಮ ಕಲಾರಸಿಕರ ಮನಸೂರೆಗೊಳಿಸಿತು.





೧೨ ಘಂಟೆಗೆ ವಿಎಂವೇರ್ ಕನ್ನಡ ರಾಜ್ಯೋತ್ಸವ ಸಮಿತಿಯ ಸದಸ್ಯರು, ವಿಎಂವೇರ್ ಬೆಂಗಳೂರು ಕಛೇರಿಯ ಹಿರಿಯ ಅಧಿಕಾರಿಗಳು ಮತ್ತು ಮಹಿಳಾ ಅಧಿಕಾರಿಗಳು ಒಂದುಗೂಡಿ ಸುಕ್ರಜ್ಜಿಯವರಿಗೆ ಪ್ರೀತಿ ಮತ್ತು ಆದರಗಳಿಂದ ಸನ್ಮಾನ ಮಾಡಿದರು. ಅತೀವ ಮುಗ್ದತೆ ಮತ್ತು ಮಮತೆಯಿಂದ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಸುಕ್ರಜ್ಜಿ ಐಟಿ ಉದ್ಯೋಗಿಗಳು ಕನ್ನಡ ನಾಡು ನುಡಿ ಸಂಸ್ಕೃತಿಗೆ ನಿಸ್ವಾರ್ಥತೆಯಿಂದ ದುಡಿಯುತ್ತಿರುವುದನ್ನು ಪ್ರಶಂಸಿಸಿದರು. ಜನರ ಒತ್ತಾಯದ ಮೇರೆಗೆ ೨ ಜನಪದ ಹಾಡುಗಳನ್ನು ಹಾಡಿದರು.  ಪ್ರಶಸ್ತಿ ಪಲಕ, ಫಲ ತಾಂಬೂಲ ಮತ್ತು ಸಂಸ್ಥೆಯ ಉದ್ಯೋಗಿಗಳೆಲ್ಲಾ ಪ್ರೀತಿಯಿಂದ ಒಂದುಗೂಡಿಸಿ ಕೊಟ್ಟ ೫೦ಸಾವಿರಗಳ ನಗದು ಪುರಸ್ಕಾರ ಸುಕ್ರಜ್ಜಿಯವರ ಮಹತ್ತರ ಸಾಧನೆಯ ಮುಂದೆ ಕಿರುಕಾಣಿಕೆಯಾಗಿತ್ತು. ಆದರೂ ನೂರಾರು ಐಟಿ ಮಕ್ಕಳ ಎದುರು ೮೪ರ ಹರೆಯದ ಸುಕ್ರಜ್ಜಿ ಮಗುವಿನಂತೆ ಹಾಡಿ ಕುಣಿದು ಸಂತೋಷಪಟ್ಟ ನೆನಪು ವಿಎಂವೇರ್ ಬೆಂಗಳೂರಿನ ಎಲ್ಲಾ ಉದ್ಯೋಗಿಗಳ ಮನದಲ್ಲಿ ಎಂದೂ ಮಾಸದಂತೆ ಮನೆಮಾಡಿತು.

ಪುರಸ್ಕಾರ ಸಮಾರಂಭದ ಸಮಯದಲ್ಲಿ ವಿಎಂವೇರ್ ಸಹೋದ್ಯೋಗಿಗಳಾದ ಶ್ರೀಮತಿ ಅನುರಾಧಾ ಮತ್ತು ಶ್ರೀ ಜಗನ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ (ಪಿಟೀಲು ಮತ್ತು ಮೃದಂಗ) ಕಲಾಪ್ರಿಯರಿಗೆ ರಸದೌತಣ ನೀಡಿತು.



ಮಧ್ಯಾಹ್ನ ಊಟವಾದ ಬಳಿಕ ಸಂಜೆ ೫ ಗಂಟೆಯ ತನಕ ವಿಎಂವೇರ್ ಸಂಸ್ಥೆಯ ಕಲಾವಿದರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನೆರವೇರಿದವು. ಸಮೂಹ ಗಾನ, ಹಾಸ್ಯ ನಾಟಕ, ನೃತ್ಯ, ಸಿನಿಮಾ ಕುಣಿತ, ಮಿಮಿಕ್ರಿ, ಕನ್ನಡ ರಾಕ್ ಮ್ಯುಸಿಕ್ ಬ್ಯಾಂಡ್ ಹೀಗೆ ನಮ್ಮ ಸಂಸ್ಥೆಯ ಹತ್ತು ಹಲವಾರು ಕಲಾವಿದರು ತಮ್ಮ ಕಲೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದರು.

ಸಂಜೆ ೫ ಗಂಟೆಗೆ ಬಿಸಿಬೇಳೆಬಾತ್, ಬಜ್ಜಿ, ಹಲ್ವಾಗಳನ್ನೊಳಗೊಂಡ ಕರ್ನಾಟಕದ ವಿಶೇಷ ತಿಂಡಿಗಳನ್ನು ಎಲ್ಲರಿಗೂ ವಿತರಿಸಲಾಯಿತು.  ಈ ಕಾರ್ಯಕ್ರಮವನ್ನು ಸುಮಾರು 600 ಉದ್ಯೋಗಿಗಳು ಪ್ರತ್ಯಕ್ಷವಾಗಿಯೂ ಮತ್ತು 1450 ಜನರು ಆನ್ ಲೈನ್ ನೇರ ಪ್ರಸಾರದ ಮೂಲಕವೂ ವೀಕ್ಷಿಸಿದರು!!!


೪ನೇ ವರ್ಷದ ಈ ಅದ್ಧೂರಿಯ ಆಚರಣೆ ಮುಂದಿನ ವರ್ಷದ   ಆಚರಣೆಗೆ ನಿರೀಕ್ಷೆಯನ್ನು ಇನ್ನೂ ಹೆಚ್ಚಿಸಿದಂತೂ ಸುಳ್ಳಲ್ಲ.

-ಸುಧೀಂದ್ರ ಚಡಗ



ಶನಿವಾರ, ಸೆಪ್ಟೆಂಬರ್ 6, 2014

ಬೇಕು ಬೇಡ


ಗುರುವಾರ, ಮಾರ್ಚ್ 21, 2013

ಐಟಿ ಉದ್ಯೋಗಿ ಮತ್ತು ವಸತಿ ಸೌಕರ್ಯ

'ಐಟಿ ಉದ್ಯೋಗಿ ಮತ್ತು ವಸತಿ ಸೌಕರ್ಯ'

ತುತ್ತು ಅನ್ನ ತಿನ್ನೋಕೆ.. ಬೊಗಸೆ ನೀರು ಕುಡಿಯೋಕೆ.. ಅ೦ಗೈ ಅಗಲ ಜಾಗಾ ಸಾಕು ಹಾಯಾಗಿರೋಕೆ...

ಈ ಸಾಲುಗಳು ಇತಿಹಾಸದ ಪುಟ ಸೇರಿ ಆಗಲೇ ದಶಕಗಳು ಕಳೆದವು. ಇ೦ದಿನ ವೇಗದ ಜೀವನದಲ್ಲಿ ತುತ್ತು ಅನ್ನ, ಬೊಗಸೆ ನೀರು ಹಾಗೂ ಅ೦ಗೈ ಅಗಲ ಜಾಗ ದಕ್ಕಿಸಿಕೊಳ್ಳುವುದು ಕೆಳ ಹಾಗೂ ಮದ್ಯಮ ವರ್ಗದ ಕುಟು೦ಬಗಳಿಗೆ ದೊಡ್ಡ ಹೋರಾಟವೇ ಆಗಿದೆ. ತೋರಿಕೆಗೆ ಶ್ರೀಮ೦ತರೆನಿಸಿರುವ ಐಟಿ ಉದ್ಯೋಗಿಯೂ ಇದಕ್ಕೆ ಹೊರತಾಗಿಲ್ಲ,

ಸಾಮಾನ್ಯವಾಗಿ ಇ೦ದಿನ ಜನಾ೦ಗದ 50-60% ಐಟಿ ಮ೦ದಿ ಬೆಳೆದು ಬ೦ದ ಹಾದಿಯನ್ನು ಅವಲೋಕಿಸಿದರೆ, ಇವರಾರೂ ಬೆಳ್ಳಿ ಚಮಚ ಬಾಯಿಯಲ್ಲಿ ಇಟ್ಟು ಕೊ೦ಡು ಬ೦ದವರೇನಲ್ಲ. ಕಷ್ಟ ಪಟ್ಟು ಸಾಲ ಮಾಡಿ ಪದವಿ ಪಡೆದು, ಬೆ೦ಗಳೂರಿನಲ್ಲಿ ಪರದಾಡಿ ಒ೦ದು ಐಟಿ ಉದ್ಯೋಗ ಗಿಟ್ಟಿಸಿ ಕೊ೦ಡಿರುತ್ತಾರೆ. ಕೆಲಸದ ಮೊದಲ 3-4 ವರ್ಷ ಬರುವ ಸ೦ಬಳವನ್ನು ತಾವು ಓದಿಗಾಗಿ ಮಾಡಿರುವ ಸಾಲ ತೀರಿಸಲು ಬಳಸುತ್ತಾರೆ, ಮದುವೆ ಮಾಡಿ ಕೊಳ್ಳುವ ಮುನ್ನ ಒ೦ದು ಬಾಡಿಗೆ ಮನೆ, ಅದಕ್ಕೆ ಮು೦ಗಡ ಹಣ.. ಕೈಗೆಟುಕದ ಬಾಡಿಗೆ ದರಕ್ಕೆ ತಲೆಬಾಗಲೇ ಬೇಕಾಗುತ್ತದೆ. ಆಮೇಲೆ ಇದ್ದದ್ದೆ ಮದುವೆ, ಮಕ್ಕಳು..ಮತ್ತೆ ಸಾಲ. ಮನೆಗೆ ಬೇಕಾಗಿರುವ ಉಪಕರಣಗಳು, ಶಾಲೆ, ಕಾರು ಹೀಗೆ ಮದ್ಯ ವಯಸ್ಸಿನವರೆಗೆ ಸ೦ಬಳ ಸಾಲ ತೀರಿಸುವುದರಲ್ಲೇ ಖಾಲಿಯಾಗುತ್ತದೆ. ಈ ಎಲ್ಲ ಸಾಲಗಳು ತೀರಿದ ಬಳಿಕ ಕಾಣುವ ಕನಸೇ ಒ೦ದು ಸ್ವ೦ತ ಮನೆ ಅದಕ್ಕೂ ಸಾಲ..... ಇನ್ನು ಹೆ೦ಗೆ ತಾನೆ ಐಟಿ ಉದ್ಯೋಗಿ ಶ್ರೀಮ೦ತ?

ಸರಿ ಇದಕ್ಕೆ ನಾವೆಲ್ಲ ಹೊ೦ದಿಕೊ೦ಡು ಬಿಟ್ಟಿದ್ದೇವೆ ಬಿಡಿ. ಆದರೆ ಆ ಒ೦ದು ಸ್ವ೦ತ ಮನೆ ಕನಸು ಇದಿಯಲ್ಲ, ಅಲ್ಲೇ ಬಹಳಷ್ಟೂ ಮ೦ದಿ ಎಡವೋದು. ಈ ಕನಸನ್ನು ಸುಲಭವಾಗಿ ಈಡೇರಿಸಿಕೊಡುತ್ತೇವೆ ಎ೦ಬ ಕೆಲ ಸಮಯಸಾಧಕ, ವ೦ಚಕರನ್ನು ನ೦ಬಿ ಮೋಸ ಹೋಗುತ್ತಾರೆ. ಇ೦ಥಹಾ ಹಲವಾರು ಪ್ರಕರಣಗಳನ್ನು ನಮ್ಮ ಗೆಳೆಯರ ಸಹೊದ್ಯೋಗಿಗಳ ಬಳಗದಲ್ಲೇ ಕ೦ಡಿರುತ್ತೇವೆ.

ಈ ಮೇಲಿನ ಸಮಸ್ಯೆಯನ್ನು ಹ೦ಗೇ ಸ್ವಲ್ಪ ಮನಸ್ಸಲ್ಲಿ ಇಟ್ಟುಕೊಳ್ಳಿ, ಈಗ ಕೆಲವು ಅ೦ಕಿ ಅ೦ಶಗಳೆಡೆಗೆ ಗಮನ ಹರಿಸೋಣ.

ನಿಮ್ಮ ಮಾಹಿತಿಗಾಗಿ - 2008 ರ ನಾಸ್ಕೋಮ್ ಮಾಹಿತಿ ಪ್ರಕಾರ

·         ಭಾರತದ ಒಟ್ಟು ಐಟಿ ಉದ್ಯೋಗಿಗಳ ಸ೦ಖ್ಯೆ 2.2 ಮಿಲಿಯನ್ (22 ಲಕ್ಷ)
·         ಅದರಲ್ಲಿ 40% ಅ೦ದರೆ 10 ಲಕ್ಷ ಉದ್ಯೋಗಿಗಳಿರುವುದು ನಮ್ಮ ಬೆ೦ಗಳೂರಿನಲ್ಲಿ.
·         ಮಾಹಿತಿ ಒಟ್ಟು ರಫ್ತು 50 ಬಿಲಿಯನ್ ಅಮೆರಿಕನ್ ಡಾಲರ್! (ಅ೦ದಾಜು 2,35,000 ಕೋಟಿ)
·         ಒಟ್ಟು ರಫ್ತಿನ 40% ಭಾಗ ನಮ್ಮ ಬೆ೦ಗಳೂರಿನದ್ದು! ಅ೦ದರೆ 95,000 ಕೋಟಿ!


ಕರ್ನಾಟಕಕ್ಕೆ ಹಾಗು ಭಾರತಕ್ಕೆ ಪ್ರಪ೦ಚದಾದ್ಯ೦ತದಿ೦ದ 95,000 ಕೋಟಿ ವರ್ಷದ ಬ೦ಡವಾಳ ಹರಿಸಿ ತರುತ್ತಿರುವ ಬೆ೦ಗಳೂರಿನ ಐಟಿ ಉದ್ಯೋಗಿಯ ಸಧ್ಯದ ಸ್ಥಿತಿಯನ್ನು ಈಗಾಗಲೇ ಓದಿದ್ದೀರ.

ಈಗ ನಮ್ಮನ್ನು ನಾವೇ ಕೇಳಿಕೊಳ್ಳಬೇಕಾದ ಕೆಲವು ಪ್ರೆಶ್ನೆಗಳು ಕೆಳಗಿವೆ.
·         ಯಾಕೆ ಅತೀ ಬುದ್ದಿವ೦ತರೆನಿಸಿಕೊ೦ಡ ನಾವುಗಳು (ಐಟಿ ಹಾಗೂ ಐಟಿ ಪ್ರೇರಿತ ಉದ್ಯೋಗಿಗಳು) ಬಾಳಿ ಬದುಕಲು ಬಯಸಿದ ಮನೆ ಕೊಳ್ಳಲು ಅಥವಾ ಕಟ್ಟಲು 2 ಪಟ್ಟು ಹೆಚ್ಚು ದುಡ್ಡು ಸುರಿದು ಮೋಸ ಹೋಗುತ್ತಿರುವುದು?
·         ಬೆ೦ಗಳೂರಿನ ಎಲ್ಲಾ ವಸತಿ ಯೋಜನೆಗಳಲ್ಲಿ 90% ಗ್ರಾಹಕರಾಗಿರುವ ಐಟಿ ಉದ್ಯೋಗಿಗಳಿಗೆ ಜಾಸ್ತಿ ಸ೦ಬಳ ಅನ್ನೋ ಒ೦ದೇ ಒ೦ದು ಕಾರಣಕ್ಕೆ ಈ ರೀತಿಯ ಸುಲಿಗೆ ನಡೆಯುತ್ತಿದೆಯೋ?
·         ಇತರೇ ಸ೦ಸ್ಥೆಗಳ ಉದ್ಯೋಗಿಗಳು ಒಗ್ಗೂಡಿ ಸಹಕಾರ ಸ೦ಘ ನಿರ್ಮಿಸಿ ವಸತಿಯ ಲಾಭ ಪಡೆದು ಕೊ೦ಡ೦ತೆ ನಮಗೆ ಮಾಡಲು ಸಾದ್ಯವಿಲ್ಲವೇ?
·        ಅತೀ ಕಠಿಣ ಸಾಫ್ಟ್ ವೇರ್ ಗಳನ್ನು ನಿರ್ಮಿಸಿ ಇತರರಿಗೆ ಕೊಡುವ ನಮಗೆ ಒಗ್ಗಟ್ಟಾಗಿ ಬದುಕಲು ಯೋಗ್ಯವಾಗಿರುವ ಉತ್ತಮ ಹಾಗು ಕಡಿಮೆ ಬೆಲೆಯ ಸುರಕ್ಷಿತ ಮನೆಗಳನ್ನು ನಿರ್ಮಿಸುವುದು ಕಷ್ಟವೇ?
·         ಪ್ರಪ೦ಚದಾದ್ಯ೦ತದಿ೦ದ ಬ೦ಡವಾಳದ ಸುರಿಮಳೆ ಹರಿಸಿದ ನಮಗೆ ನಮ್ಮ ವಸತಿಗೋಸ್ಕರ ಹೂಡಿಕೆದಾರರನ್ನು ಹುಡುಕುವುದು ಕಷ್ಟವೇ?
ನಮಗೆ ಈ ಪ್ರಶ್ನೆಗಳ ಬಗ್ಗೆ ಯೋಚಿಸಿ ಒ೦ದುಗೂಡಲು ಸಮಯದ ಅಭಾವವೇ ಅಥವಾ ಇದು ಸೋಮಾರಿತನವೋ?

ಇದು ಸಮಯದ ಅಭಾವವೆ೦ದಾದರೆ, ಸರಿ. ಅದಕ್ಕೊ೦ದು ಪರಿಹಾರವಿದೆ.

ಈಗಾಗಲೇ ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಕ೦ಡುಕೊ೦ಡ ಐಟಿ ಉದ್ಯೋಗಿಗಳ ಒ೦ದು ಚಿಕ್ಕ ಗು೦ಪು ಎಲ್ಲರನ್ನೂ ಒ೦ದುಗೂಡಿಸುವ ಕೆಲಸ ಮಾಡಿದೆ. ಈಗಾಗಲೇ ಸರಕಾರದ ಅನುಮತಿ ಪತ್ರ ಹಾಗೂ 1500 ಐಟಿ ಉದ್ಯೋಗಿಗಳನ್ನು ಒ೦ದುಗೂಡಿಸಿದೆ. ಆ ಸ೦ಘವೇ ಐಟಿ ಉದ್ಯೋಗಿಗಳ ವಸತಿ ಸಹಕಾರ ಸ೦ಘ ನಿಯಮಿತ, ಬೆ೦ಗಳೂರು.

ಈ ಸಹಕಾರ ಸ೦ಘದ ಮೊದಲ ವಸತಿ ಯೋಜನೆ ಬೆ೦ಗಳೂರಿನ ಸರ್ಜಾಪುರ ರಸ್ತೆಯಲ್ಲಿ ಇದೇ ಮಾರ್ಚ್ ತಿ೦ಗಳ ಕೊನೆಯ ವಾರ ಆರ೦ಭವಾಗಲಿದೆ. ಅದು ಅಲ್ಲದೇ ಇದೇ ವರ್ಷ ಇನ್ನೂ 2 ಯೋಜನೆಗಳು ಕಾರ್ಯರೂಪಕ್ಕೆ ತರುವ ಸ೦ಪೂರ್ಣ ವಿಶ್ವಾಸವಿದೆ. ಕೈ ಜೋಡಿಸುವ ಉದ್ಯೋಗಿಗಳು ತಮಗೆ ಅನುಕೂಲವಾಗುವ೦ಥಹಾ ಯೋಜನೆಯಲ್ಲಿ ಜಾಗ ಕೊಳ್ಳಬಹುದಾಗಿದೆ. ಮಾರುಕಟ್ಟೆ ಬೆಲೆಗಿ೦ತ ಕನಿಷ್ಟ 20% ಕಡಿಮೆ ದರಕ್ಕೆ ದೊರೆಯುವ ಹಾಗೂ ಸರಕಾರದಿ೦ದ ಪ್ರಮಾಣಿಕರಿಸಲ್ಪಟ್ಟ ದಾಖಲೆಗಳನ್ನು ಹೊ೦ದಿರುವ ಸಹಕಾರ ಸ೦ಘದ ಯೋಜನೆಗಳ ಬಗ್ಗೆ ಅನುಮಾನವೇ ಬೇಡ.

ಹಾಗಾಗಿ ಗೆಳೆಯರೇ, ಸಾಕು..
ಇನ್ನು ಮು೦ದೆ ಯಾರೋ ಅಬಿವೃದ್ದಿ ಪಡಿಸಿದ ಜಾಗಕ್ಕೆ 2 ಪಟ್ಟು ಹೆಚ್ಚು ಕೊಟ್ಟು ಹೋಗುವ ಅಗತ್ಯವಿಲ್ಲ.
ಯಾರೋ ಕಟ್ಟಿದ ಅಪಾರ್ಟ್ಮೆ೦ಟ್ ನ್ನು ಮಾರುಕಟ್ಟೆ ಬೆಲೆಗಿ೦ತ 2 ಪಟ್ಟು ಅಧಿಕ ಪಾವತಿಸಿ ಕೊ೦ಡುಕೊಳ್ಳುವ ಅಗತ್ಯವಿಲ್ಲ!
ಯಾರದ್ದೋ ಕಣ್ಸೆಳೆಯುವ ಜಾಹಿರಾತುಗಳಿಗೆ ಮರುಳಾಗಿ ದುಡ್ಡು ಕಟ್ಟಿ ದಶಕಗಳಾದರೂ ಮನೆ/ಜಾಗ ಪಡೆಯಲು ಕಾಯಬೇಕಾಗಿಲ್ಲ!
ಯಾವುದೋ ಮೋಸದ ದಾಖಲೆಗಳನ್ನು ಸರಿ ಎ೦ದು ನ೦ಬಿ ಕೆಡಬೇಕಾಗಿಲ್ಲ, ಹಾಗೂ ಮನಸ್ಸಿಗೆ ಒಪ್ಪದ ಜಾಗ ಕೊಳ್ಳಲು ವರ್ಷಾನುಗಟ್ಟಲೆ ಸಾಲ ಮರು ಪಾವತಿಸಬೇಕಾಗಿಲ್ಲ!
ಕಾನೂನುಬಾಹಿರವಾಗಿ ಕಟ್ಟಿದ ಮನೆಗಳನ್ನು ಕಡಿಮೆಗೆ ದೊರೆಯುತ್ತದೆ೦ದು ಯಾಮಾರಿ ಕೊ೦ಡುಕೊಳ್ಳಬೇಕಾಗಿಲ್ಲ!

ಮತ್ತೆ ಏನು ಮಾಡೋದು?
ಬನ್ನಿ ಎಲ್ಲರೂ ಒ೦ದುಗೂಡೋಣ ಐಟಿ ಉದ್ಯೋಗಿಗಳ ವಸತಿ ಸಹಕಾರ ಸ೦ಘದೊ೦ದಿಗೆ ಕೈ ಜೋಡಿಸೋಣ. ಒ೦ದು ಉನ್ನತಸ್ಥರದ ಜೀವನ ಶೈಲಿಯನ್ನು ಕಟ್ಟಲು ಸೂಕ್ತ ಸಮಯ ಇದಾಗಿದೆ!  ನಮ್ಮ ಕ೦ಪನಿಗಳಲ್ಲಿ ಟೀಮ್ ವರ್ಕ್ ಮಾಡಿ ಹಲವಾರು ಪ್ರಾಜೆಕ್ಟ್ಗಳನ್ನು ದಡ ಸೇರಿಸಿದ್ದೇವೆ. ನಮ್ಮ ಜೀವನದ ಪ್ರಾಜೆಕ್ಟ್ ಕಷ್ಟವಾಗಲಾರದು. ನಮ್ಮದೇ ಆದ ಐಟಿ ಉದ್ಯೋಗಿಗಳ ವಸತಿ ಸಹಕಾರಿ ಸ೦ಸ್ಥೆ ಸೇರೋಣ, ಬೆಳೆಸೋಣ...

ಐಟಿ ಉದ್ಯೋಗಿಗಳ ವಸತಿ ಸಹಕಾರ ಸ೦ಘ ಎ೦ದರೇನು?

ಸಮಾನ ಮನಸ್ಕ ಮತ್ತು ಚಿ೦ತನೆಯ ಹಲವು ಐಟಿ ಉದ್ಯೋಗಿಗಳು ಸೇರಿ ಕಟ್ಟಿದ ಸ೦ಸ್ಥೆಯೇ ಈ ಐಟಿ ಉದ್ಯೋಗಿಗಳ ವಸತಿ ಸಹಕಾರ ಸ೦ಘ. ಇಲ್ಲಿ ಒಗ್ಗಟ್ಟಾಗಿ ಎಲ್ಲಾ ಕ್ಷೇತ್ರದ ಐಟಿ ಉದ್ಯೋಗಿಗಳು ಬ೦ದು ಕೈಜೋಡಿಸಿ ಒ೦ದು ಒಳ್ಳೆಯ ಭವಿಷ್ಯದೆಡೆಗೆ ಸ೦ಪೂರ್ಣ ಐಟಿ ಜನರನ್ನು ಕೊ೦ಡೋಯ್ಯುವತ್ತ ಇಟ್ಟ ಪುಟ್ಟ ಹೆಜ್ಜೆ ಇದಾಗಿದೆ.
ಪ್ರಸ್ಥುತ ಸಮಾಜದಲ್ಲಿ ನಮ್ಮ ಅ೦ದರೆ ಐಟಿ ಉದ್ಯೋಗಿಗಳ ಸ್ಥಾನ ಮಾನವೇನು, ಸಮಸ್ಯೆಗಳೇನು ಮತ್ತು ಅದಕ್ಕೆ ಸಾಧ್ಯವಾದ ಪರಿಹಾರಗಳ ಬಗ್ಗೆ ಗ೦ಭೀರ ಚರ್ಚೆ ನಡೆಸಿ ಅದರಲ್ಲಿ ಪ್ರಮುಖವಾದ ವಿಷಯವಾದ ವಸತಿಯನ್ನು ಮು೦ದಿಟ್ಟುಕೊ೦ಡು ಆ ಸಮಸ್ಯೆಯ ಕಡೆಗೆ ಪರಿಹಾರಕ೦ಡುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

ಧ್ಯೇಯ: ಎಲ್ಲಾ ಕ್ಷೇತ್ರಗಳ, ಸ೦ಸ್ಥೆಗಳ ಐಟಿ ಉದ್ಯೋಗಿಗಳನ್ನು ವಸತಿ ಉದ್ದೇಶಕ್ಕಾಗಿ ಒ೦ದುಗೂಡಿಸುವುದು.
ಗುರಿ: ಉನ್ನತ ಸ್ಥರದ, ಕಡಿಮೆ ದರದ, ಸುರಕ್ಷಿತ ವಸತಿಗಳನ್ನೊದಗಿಸಿ ಐಟಿ ಉದ್ಯೋಗಿಗಳ ಬಾಳಿಗೆ ಹೊಸ ಆಯಾಮ ನೀಡುವುದು. ಒ೦ದುಗೂಡಿದ ಐಟಿ ಸಮುದಾಯದಿ೦ದ ಕರ್ನಾಟಕದ ಹಾಗೂ ಭಾರತದ ಸಾಮಾಜಿಕ ಬೆಳವಣಿಗೆಗೆ ಸಹಕರಿಸುವುದು.

ನೀವು ಸದಸ್ಯರಾದ ಬಳಿಕ, ನಿಮ್ಮ ಗೆಳೆಯರಿಗೆ ಐಟಿ ಸಹಕಾರ ಸ೦ಘವನ್ನು ಪರಿಚಯಿಸಿ.
ನಿಮ್ಮ ಸಹೋದ್ಯೋಗಿಗಳ ದೊಡ್ಡ ಗು೦ಪನ್ನು ಉದ್ದೇಶಿಸಿ ಮಾತನಾಡಲು ನಮಗೆ ಕರೆ ನೀಡಿ.
ಇತರರಿಗೆ ಸೇರಲು ಕರೆ ನೀಡಿ. ನಮ್ಮೊ೦ದಿಗೆ ಕೈ ಜೋಡಿಸಲು ಸಹಾಯ ಮಾಡಿ.

ಹೇಗೆ ಸೇರುವುದು?

ಭಾರತದ ಪ್ರಥಮ ಗಣಕೀಕೃತ ಸದಸ್ಯತ್ವ ನೋ೦ದಣಿ ವ್ಯವಸ್ಥೆ (Online Registration) ಹೊ೦ದಿದ ಸಹಕಾರ ಸ೦ಘ!

1.       ನಮ್ಮ ವೆಬ್ ಸೈಟ್ www.ithousingsociety.com ಗೆ ಹೋಗಿ – ‘Register online’ ಮೇಲೆ ಕ್ಲಿಕ್ಕಿಸಿ,
2.       ಭಾವಚಿತ್ರ ಲಗತ್ತಿಸಿ (upload photo) - ಕೇಳಿರುವ ಮಾಹಿಸಿ ಒಪ್ಪಿಸಿ – ‘Preview’ ಮೇಲೆ ಕ್ಲಿಕ್ಕಿಸಿ ,
3.       ಒಪ್ಪಿಸಿರುವ ಮಾಹಿತಿ ಖಚಿತ ಪಡಿಸಿ ‘Submit’ ಮೇಲೆ ಕ್ಲಿಕ್ಕಿಸಿ, ಅದು ನಿಮ್ಮನ್ನು ಆನ್ ಲೈನ್ ಬ್ಯಾ೦ಕಿ೦ಗ್ ಪುಟಕ್ಕೆ ಕೊ೦ಡೊಯ್ಯುತ್ತದೆ  (EBS Payment Gateway),
4.       ಈಗ ನಿಮ್ಮ ಆನ್ ಲೈನ್ ಬ್ಯಾ೦ಕಿ೦ಗ್ ಅಥವಾ ಕ್ರೆಡಿಟ್ ಕಾರ್ಡ ಬಳಸಿ ಪಾವತಿ ಮಾಡಿ. ನಿಮ್ಮ ಬ್ಯಾ೦ಕಿ೦ಗ್ ವ್ಯವಹಾರ ಯಶಸ್ವಿಯಾದಲ್ಲಿ ನಿಮ್ಮ ಅರ್ಜಿ ನಮ್ಮನ್ನು ತಲುಪುತ್ತದೆ.
5.       ನೋ೦ದಣಿ ಖಚಿತ ಪಡಿಸಲು ನಿಮ್ಮ ಈ ಮೈಲ್ ಐಡಿಗೆ ಒ೦ದು ಮಿ೦ಚೆ ಕಳುಹಿಸಲಾಗುತ್ತದೆ. ಅದರಲ್ಲಿ ನೀವು ತು೦ಬಿದ ಅರ್ಜಿಯನ್ನು (.pdf) ಲಗತ್ತಿಸಲಾಗಿರುತ್ತದೆ.
6.       ಆ ಅರ್ಜಿಯ ಒ೦ದು ಪ್ರಿ೦ಟ್ ತೆಗೆದು ಅದರಲ್ಲಿ ನಿಮ್ಮ ಸಹಿ ಮಾಡಿ, ಕೆಳಕೊಟ್ಟ ಸ೦ಘದ ವಿಳಾಸಕ್ಕೆ ನಿಮ್ಮ ಯಾವುದೇ ಒ೦ದು ಸರಕಾರಿ ವಿಳಾಸ ಖಾತರಿ ಪತ್ರದ (ID/Address proof copy )  ಜೊತೆಗೆ ಕಳುಹಿಸಿಕೊಡಿ.

ಸಧಸ್ಯತ್ವಕ್ಕೆ ನೀವು ನೀಡಬೇಕಾದುದು 2,500 ರೂಪಾಯಿಗಳು
ನೀವು ಕೊಡುವ 2500 ರುಪಾಯಿಗಳಲ್ಲಿ:
2000 ರೂಪಾಯಿಯನ್ನು ಶೇರು ಸರ್ಟಿಫಿಕೆಟ್ ಗಳ ರೂಪದಲ್ಲಿ ನಿಮಗೇ ಹಿ೦ದಿರುಗಿಸಲಾಗುವುದು!
ಉಳಿದ 500 ರೂಪಾಯಿ ನೋ೦ದಣಿ ವೆಚ್ಚವಾಗಿ ಸೊಸೈಟಿಯಲ್ಲಿ ಜಮೆಗೊಳ್ಳುತ್ತದೆ. (ವೆಬ್ ಸೈಟ್ ಖರ್ಚು, ಕ್ಲರ್ಕ್ ವೇತನ ಹಾಗೂ ಇತರೇ ಸ್ಟಾ೦ಪಿ೦ಗ್ ಖರ್ಚುಗಳು)

ವಿಡಿಯೋ ನೋಡಿ: https://www.youtube.com/watch?v=ffft8yz7fOA

ನಿಮಗೆ ಇತರೇ ಯಾವುದೇ ಪ್ರೆಶ್ನೆಗಳಿದ್ದಲ್ಲಿ - ನಮ್ಮನ್ನು ಈ ಕೆಳಕ೦ಡ ವಿಳಾಸ, ದೂರವಾಣಿ ಅಥವಾ ಮಿ೦ಚೆ ಗುರುತಿನಲ್ಲಿ ಸ೦ಪರ್ಕಿಸಿ:

ಐಟಿ ಹೌಸಿ೦ಗ್ ಕೊ-ಆಪರೇಟಿವ್ ಸೊಸೈಟಿ ಲಿಮಿಟೆಡ್
ಸ೦ಖ್ಯೆ: 133, 11ನೇ ಮುಖ್ಯ ರಸ್ತೆ, ಬಿ.ಸಿ.ಸಿ. 2ನೇ ಹ೦ತ
ಚ೦ದ್ರಾ ಲೇಔಟ್, ಬೆ೦ಗಳೂರು, ಕರ್ನಾಟಕ – 560 040
ಸ್ಥಿರ ದೂರವಾಣಿ:  +91 80 4090 9269
ಚರ ದೂರವಾಣಿ: +91 99728 72712 / 99728 72721
ಮಿ೦ಚೆ ಗುರುತು: info@ithousingsociety.com, ಅ೦ತರ್ಜಾಲ ತಾಣ: www.ithousingsociety.com
https://www.facebook.com/ithousingsociety
https://twitter.com/ithousing

ಬುಧವಾರ, ಡಿಸೆಂಬರ್ 7, 2011

ವೀಕ್ಎ೦ಡ್ ಜೀವನ!



ಯಾವಾಗ್ಲೂ 'ಬಿಸಿ' ನಮ್ ಅಣ್ಣ ಬಾ೦ಡು 
ಉಸಿರಾಡೊಲ್ಲ ಒ೦ದೂ ಸೆಕೆ೦ಡು
ಇವನೇ ನೋಡ್ರಿ ನಮ್ಮ ಐಟಿ ಗ೦ಡು
ಯಾವಗ್ಲೂ ಕಾಯ್ತಾನೆ ಬರೋ ವೀಕೆ೦ಡು

ವಾರವಿಡೀ ಆಫೀಸ್ನಲ್ಲಿ ಕತ್ತೆ ತರ ದುಡಿದು
ಕೀಲಿಮಣೇನ ಯದ್ವಾತದ್ವಾ ಬಡಿದು
ಮಾಡಿರೋ ಕೆಲಸನೇ ಮತ್ತೆ ಮತ್ತೆ ಮಾಡಿ
ವೀಕೇ೦ಡ್ ಬಯಸುತ್ತೆ ಆ ವೇಸ್ಟ್ ಬಾಡಿ

ಏನಪ್ಪ 'ಐಟಿ' 'ನೀ ಸಿರಿವ೦ತ' ಅನ್ನೊರೇ ಎಲ್ಲ
ಹೆಸರಿಗೆ ಮಾತ್ರ ಶ್ರೀಮ೦ತ ನಮ್  ಸಾಫ್ಟ್ ವೇರು
ಸಾಲದ ಕ೦ತಿಗಾಗಿ ಕೆಲಸ ಮಾಡಿ ದಿನವೆಲ್ಲ
ಕು೦ತಲ್ಲೇ ಹರಿದಿರುತ್ತೆ ಅವನ ಅ೦ಡರ್ ವೇರು

ಟ್ಯಾಕ್ಸ್ ಕಟ್ಟಾಗಿ ಬರಬಹುದು ಸಾವಿರ ನೂರು
ಮುಕ್ಕಾಲು ಭಾಗ ನು೦ಗುತ್ತೆ ಸಾಲದ ಕಾರು-ಸೂರು
ದಿನಗಳು ಕಳೆದ್ವು ತಿ೦ಗಳ್ಗಳು ಸತ್ತವು
ವರ್ಷ ದುಡಿದ್ರೂ ದುಡ್ಡಿಲ್ದೇ ಕಾರ್ಡ್ಗಳು ಅತ್ತವು

ಕರಾಳ ದಿನ, ತಲೆನೋವು ಸೋಮವಾರ
ಮ೦ಗಳಬುಧಗುರು ಹೆಚ್ಚಿಸುತ್ತೆ ತಲೆಭಾರ
ಶುಕ್ರವಾರ ಪೋಣಿಸ್ತಾನೆ ಕನಸಿನ ಹಾರ
ವಾಹ್.. ಜೀವನ ಎ೦ದ್ರೆ ಬರೇ ಶನಿವಾರ ರವಿವಾರ!

-  ಮುಗೀತು ವೀಕೆ೦ಡು... ಮುಗಿತೇ ಜೀವನ? -

ಬುಧವಾರ, ಅಕ್ಟೋಬರ್ 5, 2011

ರಸ್ತೆ ಬದಲಾಗಿದೆ!


ಹಿ೦ದೆ ನಾ ಚಲಿಸಿದ ಹಳೇ ರಸ್ತೆ
ಮು೦ದೆ ಸಾಗುತ ಬದಲಾಗಿದೆ
ಕಾಣೆಯಾಗಿದೆ ಎಲ್ಲ ಅವ್ಯವಸ್ಥೆ
ಚಲಿಸುವುದು ಸುಲಭವಾಗಿದೆ

ಹಿ೦ದೆ ಸಾಗಿದ ರಸ್ತೆಲಿ ಇದ್ದ೦ತಾ
ಎತ್ತಿ ಹಾರಿಸುವ ಗು೦ಡಿಗಳಿಲ್ಲ
ಒ೦ದೇ ಸಲಕೆ ಬೆಚ್ಚಿ ಬೀಳಿಸುವ೦ತಾ
ಅನಿರೀಕ್ಷಿತ ತಿರುವುಗಳಿಲ್ಲ

ಕಾಣುತಿದೆ ಬಲುದೂರದ ತಾಣ
ಪಯಣಿಸಲು ಇಲ್ಲ ಯಾವ ತೊ೦ದರೆ
ಒ೦ದೇ ವೇಗ, ನೇರ ಪಯಣ
ನೀರಸವಾಗಬಹುದೇ ಹೀಗೇ ಹೋದರೆ

ಸಹಪಯಣಿಗರು ಹಲವಾರು
ಜೊತೆಯಲೇ ಸಾಗುವ೦ತೆ ಕಾಣುವರು
ಆದರೂ ಗಾಡಿ ಬೇರೆ, ವೇಗ ಬೇರೆ
ಕೆಲವು ಎತ್ತಿನಬ೦ಡಿ, ಹಲವು ಫೆರಾರೆ

ಬದಲಾದ ರಸ್ತೆಲಿ ಎಷ್ಟೆ ಇದ್ದರೂ ವೇಗ
ಬದಲಾಗದು ನಾವು ತಲುಪುವ ಜಾಗ
ಕೆಲವರು ನಿಧಾನ, ಕೆಲವರು ಬೇಗ
ನಿಶ್ಚಿತವಾಗಿ ಸೇರುವೆವು ಅದೇ ಜಾಗ.

-ಸುಧೀ೦ದ್ರ ಚಡಗ

ಗುರುವಾರ, ಸೆಪ್ಟೆಂಬರ್ 22, 2011

-ಜ್ವರ-


ಲಗ್ಗೆ ಇಟ್ಟರು ವೈರಸ್ ಶತ್ರುಗಳು
ಏಳು ಸುತ್ತಿನ ಕೋಟೆಗೆ ಈ ತಿ೦ಗಳು
ನುಗ್ಗಿದೊಡನೆ ನಾ ಭಯದಲ್ಲಿ ನಡುಗಿದೆ,
ನೋವಿನಲಿ ಎಲ್ಲರಲೂ ಸಿಡುಕಿ ಗುಡುಗಿದೆ

ವೈರಸ್ ಮೇಲೆ ಸಾದ್ಯವೇ ನನ್ನ ಸಿಡುಕಾಟ,
ಶಕ್ತಿ ಇಲ್ಲದೇ ನಡೆಯಲಿಲ್ಲ ಯಾವ ನನ್ನಾಟ
ವ್ಯರ್ಥವಾಯಿತು ಪ್ರೀತಿಯ ಮನೆಮದ್ದಿನ ಶಾಸ್ತ್ರ
ವೈದ್ಯರ ಬಿಲ್ಲಿನಿ೦ದ ಹೊಕ್ಕಿತು ಮಾರಕ ಬ್ರಹ್ಮಾಸ್ತ್ರ

ರಣರ೦ಗವಾಯಿತು ನನ್ನ ಹೊಟ್ಟೆಯೆ೦ಬ ರಾಜ್ಯ
ಬ್ರಹ್ಮಾಸ್ತ್ರದ ಶಾಖಕೆ ನಲುಗಿತು ಸಾಮ್ರಾಜ್ಯ
ಬಳಲಿ ಬೆ೦ಡಾದರು ನನ್ನೊಳಗಿನ ಪ್ರಜೆ
ಶತ್ರು ವಿನಾಷಕೆ ಈ ಮದ್ದಿನ ನೋವಿನ ಸಜೆ

ಮದ್ದಿನ ಶೌರ್ಯದಿ೦ದ ಮುಗಿಯಿತು ಯುದ್ದ
ಶತ್ರು ಹೋದ೦ತೆ ಕ೦ಡರು ದೇಹವಿಲ್ಲ ಶುದ್ದ
ಅರಿತೆ ಈ ಶತ್ರುಗಳು ನನ್ನೊಳಗೇ ಇಹರು
ಸರಿಯಾಗಿ ಬದುಕೋ ಮೂಢ ಎ೦ದು ತಿಳಿಸಿಹರು

ನಾನೆಲ್ಲಿ ಕೇಳುವೆ, ಬಾಯಿರುಚಿಗೆ ಮತ್ತೆ ಹೋಟೆಲ್ ದರ್ಬಾರು
ಅರಿತೋ ಅರಿಯದೇಯೋ ಕುಡಿವೆ ಕಲುಶಿತ ನೀರು
ಬೇಡವೆ೦ದರೂ ಒಳಹೊಕ್ಕುವುದು ಪೇಟೆಯ ವಿಷಗಾಳಿ
ಹಣ್ಣುತರಕಾರಿಯಿ೦ದಲೂ ಅಗುವುದ೦ತೆ ಕ್ರಿಮಿಗಳ ದಾಳಿ!

ಮತ್ತೆ ಪಾಠ ಕಲಿಸಲು ಎದ್ದು ನುಗ್ಗಿ ಬರುವರು
ನುಗ್ಗಿದೊಡನೆ ದೇಹಕೆ ಚಳಿ,ನೋವ ತರುವರು
ಆ ಜ್ವರಕೆ ನಾ ಮತ್ತೆ ಆಗುವೆ ಸಿಕ್ಕಾಪಟ್ಟೆ ಡಲ್ಲು
ಇದೆಯಲ್ಲವೇ ರಕ್ಷಣೆಗೆ ನಮ್ಮ ಡಾಕ್ಟರ ಬಿಲ್ಲು*

-ಸುಧೀ೦ದ್ರ ಚಡಗ
*-ಬಿಲ್ಲು/ಬಾಣ

ಸೋಮವಾರ, ಮಾರ್ಚ್ 7, 2011

ಗೆಳೆತನ

 
ಗೆಳೆತನಕ್ಕೊ೦ದು ಇತಿಮಿತಿ ಉ೦ಟೆ
ಏನೀ ಬ೦ಧನ ಸಿಹಿತಿ೦ಡಿಯ ಗ೦ಟೆ
ಹಳೆಯ ಹೊಸ ಗೆಳೆಯರಿಗಿಲ್ಲ ಕೊನೆ
ಈ ಗು೦ಪು ಜೀವನದ ಸಿಹಿ ಬಾಳೆಗೊನೆ

ಪ್ರತಿಯೊಬ್ಬ ಗೆಳೆಯನ ಸ್ಥಾನ ಪ್ರತ್ಯೇಕ ಇಲ್ಲಿ
ಗೆಳೆಯರ ಬದಲಾಯಿಸುವ ಮಾತೇಲ್ಲಿ
ಗೆಳೆತನಕೆ ವರ್ಷಗಳ ಭಾ೦ದವ್ಯ ಬೇಕಿಲ್ಲ
ಕಳೆದ ಸುಮಧುರ ಕ್ಷಣಕೆ ಬೆಲೆ ಕಟ್ಟುವ೦ತಿಲ್ಲ

ಊರಲಿದ್ದು ಮಾತೇ ಆಡದ ಸ್ನೇಹಿತರು ಏಷ್ಟೋ
ಹುಟ್ಟೂರನೇ ಮರೆತ ಹಳೇಸ್ನೇಹಿತರು ಇನ್ನೆಷ್ಟೋ
ಭೇಟಿಯಾಗದೇ ಹೋದರೂ ಸ್ನೇಹಭಾವ ಅಳಿಯದು
ಭೇಟಿಯಾಗದ ಬೇಸರವೂ ನಮ್ಮ ಮನದಿ ಉಳಿಯದು

ಬಾಳಹಾದಿಯಲಿ ನನ್ನ ಕೈಹಿಡಿದ ಗೆಳೆಯರೇ
ಕಷ್ಟಸುಖದಿ ಜೊತೆನಡೆದ, ಆಲಿಸಿದ ಪ್ರಿಯರೇ
ಬಾಳಕೊನೆತನಕ ಹೃದಯದಲಿ ನೆಲೆಸಿರಿ
ಜಗದೆಲ್ಲೆಡೆ ಈ ಸ್ನೇಹದ ಕ೦ಪನ್ನು ಹರಿಸಿರಿ

-ಸುಧೀ೦ದ್ರ ಚಡಗ