ವಿಎಂವೇರ್ ಸಂಸ್ಥೆಯ ಅದ್ಧೂರಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ - 2018
ಅಮೇರಿಕಾ ಮೂಲದ ಸುಪ್ರಸಿದ್ದ ಸಾಫ್ಟ್ ವೇರ್ ಕಂಪನಿ ವಿಎಂವೇರ್ ನ ಉದ್ಯೋಗಿಗಳು ಬೆಂಗಳೂರು ಜೆಪಿನಗರದ ತಮ್ಮ ಕಛೇರಿಯಲ್ಲಿ ದಿನಾಂಕ ೧೬ ನವೆಂಬರ್ ೨೦೧೮ ಶುಕ್ರವಾರದಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.

ಈ ವರ್ಷದ ಆಚರಣೆಯನ್ನು ಮಹಿಳಾ ಪ್ರಧಾನವಾಗಿರಿಸಬೇಕೆಂದು ಕನ್ನಡರಾಜ್ಯೋತ್ಸವ ಸಮಿತಿಯ ಉದ್ದೇಶವಾಗಿತ್ತು. ಅದಕ್ಕಾಗಿಯೇ ಮುಖ್ಯ ಅತಿಥಿಯಾಗಿ ಪದ್ಮಶ್ರೀ ಪುರಸ್ಕೃತ ಶ್ರೀಮತಿ ಸುಕ್ರಿ ಬೊಮ್ಮಗೌಡ ಅವರನ್ನು ಆಹ್ವಾನಿಸಲಾಗಿತ್ತು. ಅದೂ ಅಲ್ಲದೇ ೫೦ ಮಹಿಳಾ ಜನಪದ ಕಲಾವಿದರನ್ನು ಜನಪದ ನೃತ್ಯಗಳ (ಡೊಳ್ಳು ಕುಣಿತ, ವೀರಗಾಸೆ, ನಂದಿಕೋಲು, ಫೂಜ/ಪಟ ಕುಣಿತ, ಕಂಸಾಳೆ) ಮೆರವಣಿಗೆ ನಡೆಸಿಕೊಡಲು ಆಹ್ವಾನಿಸಲಾಗಿತ್ತು.
ಶ್ರೀಮತಿ ಸುಕ್ರಜ್ಜಿಯವರು ಕನ್ನಡ ಜನಪದ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರ ಮತ್ತು ಅವರು ಸಮಸ್ತ ಕನ್ನಡನಾಡಿಗೆ ಹೆಮ್ಮೆ. ಶ್ರೀಮತಿ ಸುಕ್ರಿ ಅವರು ಜಾನಪದ ಹಾಡುಗಳ ಕಣಜ, ಬತ್ತದ ಗೀತ ಕಾರಂಜಿ. ಪರಂಪರಾಗತ ಜ್ಞಾನ ಹಾಗೂ ಪ್ರತಿಭಾಶಕ್ತಿಯನ್ನು ಮೈಗೂಡಿಸಿಕೊಂಡು ಜಾನಪದ ಕ್ಷೇತ್ರದಲ್ಲಿ ಅರಳಿದ ಕಾನನ ಕುಸುಮ. ತಮ್ಮದೇ ಆದ ತಂಡ ಕಟ್ಟಿ ಸಂಗಡಿಗರಿಗೆ ಪ್ರಾಚೀನ ಕುಣಿತ ತಾರ್ಲೆ, ಬಿದರಂಡೆ ಕಲೆಗಳನ್ನು ಕಲಿಸುತ್ತಾ ಅವರಿಗೆ ಜಾನಪದ ಧೀಕ್ಷೆ ನೀಡಿ ಅವರನ್ನು ಬೆಳೆಸುತ್ತಾ ಬಂದಿರುವ ಮಹಾನ್ ಕಲಾವಿದೆ. ಸುಕ್ರಿ ಅವರು ಅಪಾರ ಸಾಮಾಜಿಕ ಎಚ್ಚರ ಹಾಗೂ ಕಳಕಳಿಯುಳ್ಳವರು. ಮದ್ಯಪಾನದ ಪಿಡುಗಿನ ವಿರುದ್ಧ ಸಮರವನ್ನೇ ಸಾರಿದ ಧೀರ ವನಿತೆ. ಬುಡಕಟ್ಟು ಜನಾಂಗದ ಬಗ್ಗೆ ಅವರ ಆಳವಾದ ಚಿಂತನೆ ಹಾಗೂ ಒಳನೋಟಗಳು ಬೆರಗು ಹುಟ್ಟಿಸುತ್ತವೆ. ಪರಂಪರಾಗತವಾಗಿ ಬಂದಿರುವ ನಾಟಿ ವೈದ್ಯ ಪದ್ಧತಿಯನ್ನು ಉಳಿಸಿಕೊಡು ಬಂದಿರುವವರು ಶ್ರೀಮತಿ ಸುಕ್ರಿ. ಜಾನಪದ ಕಾವ್ಯಗಳಿಗೆ ತಮ್ಮ ಹಾಡುಗಾರಿಕೆಯಿಂದ ಜೀವ ತುಂಬುವ ಸುಕ್ರಿ ಅವರು ನಾಡಿನಾದ್ಯಂತ ಸಭೆ ಸಮಾರಂಭಗಳಲ್ಲಿ, ಆಕಾಶವಾಣಿ - ದೂರದರ್ಶನಗಳಲ್ಲಿ ಹಾಡಿ ಜನಮೆಚ್ಚುಗೆ ಗಳಿಸಿರುವ ಪ್ರತಿಭಾನ್ವಿತೆ. ಭಾರತ ಸರಕಾರದಿಂದ ”ಪದ್ಮಶ್ರೀ” ಪ್ರಶಸ್ತಿಯನ್ನು, ಕರ್ನಾಟಕ ರಾಜ್ಯ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಮುಖ್ಯಮಂತ್ರಿಗಳ ಬಂಗಾರದ ಪದಕ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿಗಳ ಸರಮಾಲೆ ಶ್ರೀಮತಿ ಸುಕ್ರಿಯವರ ಮುಡಿಗೇರಿದೆ. ಈ ಎಲ್ಲಾ ಪ್ರಶಸ್ತಿಗಳಿಂದ ಉತ್ತರಕನ್ನಡ ಜಿಲ್ಲೆಯಷ್ಟೆ ಅಲ್ಲ ಕರ್ನಾಟಕ ರಾಜ್ಯವು ಅತೀವ ಹೆಮ್ಮೆಯಿಂದ ಬೀಗುವಂತೆ ಮಾಡಿದ್ದಾರೆ.
ಅವರನ್ನು ಬಹಳ ಹೆಮ್ಮೆಯಿಂದ, ವಿಜ್ರಂಭಣೆಯಿಂದ ಐವತ್ತಕ್ಕೂ ಮೀರಿ ಜನಪದ ಕಲಾವಿದರ ಕುಣಿತದೊಂದಿಗೆ ನೂರಾರು ವಿಎಂವೇರ್ ಉಧ್ಯೋಗಿಗಳು ಮೆರವಣಿಗೆಯಲ್ಲಿ ಕಚೇರಿಗೆ ಬಹಳ ಹರ್ಷೋಲ್ಲಾಸದಿಂದ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಕನ್ನಡ ಕಲಾವಿದರನ್ನೊಳಗೊಂಡು ಸುಕ್ರಜ್ಜಿ ಆಸೀನರಾಗಿದ್ದ ರಾಜರಥ ಮೆರವಣಿಗೆಯ ಕೇಂದ್ರಬಿಂದುವಾಗಿತ್ತು.
ರಥದ ಮುಂಬಾಗದಲ್ಲಿ ಮಹಿಳಾ ಡೊಳ್ಳು ಕುಣಿತ, ಮಹಿಳಾ ಕಂಸಾಳೆ, ಮಹಿಳಾ ವೀರಗಾಸೆ, ಮಹಿಳಾ ನಂದಿಕೋಲು, ಮಹಿಳಾ ಪಟ ಕುಣಿತ ಮತ್ತು ಭರತನಾಟ್ಯ ತಂಡಗಳು ಕಣ್ಮನ ಸೆಳೆಯುತ್ತಿತ್ತು. ಬೆಳಿಗ್ಗೆ ೧೦ ಗಂಟೆಗೆ ಆರಂಭವಾದ ಈ ಮೆರವಣಿಗೆ ಜೆಪಿನಗರದ ಡಾಲರ್ಸ್ ಕಾಲನಿಯಲ್ಲಿ ಕನ್ನಡ ಜನಪದ ಸೊಗಡಿನ ಹೂಮಳೆ ಸುರಿಸಿತು.
ಕಛೇರಿಯ ಮುಂಬಾಗ ನೂರಾರು ಉದ್ಯೋಗಿಗಳೆದುರು Colors ಕನ್ನಡ ಕೋಗಿಲೆ ಪ್ರಸಿದ್ಧಿ ಪಡೆದ ಅನೀಶ್ ರಾವ್ ಅವರು ತಮ್ಮ ಸಿರಿಕಂಠದಲ್ಲಿ ಗಂದದಗುಡಿ ಹಾಡನ್ನು ಹಾಡಿ ಕನ್ನಡಿಗರ ಕಿಚ್ಚನ್ನು ಹೆಚ್ಚಿಸಿದರು. ಅದಾದ ಬಳಿಕ ಜನಪದ ಮತ್ತು ರಂಗಕರ್ಮಿ ಶ್ರೀ ನಾಗರಾಜ ಮೂರ್ತಿ ಅವರ ನೇತ್ರತ್ವದಲ್ಲಿ ಜನಪದ, ಭರತನಾಟ್ಯಗಳ ಜುಗಲ್ಬಂದಿ ನೃತ್ಯ ಕಾರ್ಯಕ್ರಮ ಕಲಾರಸಿಕರ ಮನಸೂರೆಗೊಳಿಸಿತು.
ಪುರಸ್ಕಾರ ಸಮಾರಂಭದ ಸಮಯದಲ್ಲಿ ವಿಎಂವೇರ್ ಸಹೋದ್ಯೋಗಿಗಳಾದ ಶ್ರೀಮತಿ ಅನುರಾಧಾ ಮತ್ತು ಶ್ರೀ ಜಗನ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ (ಪಿಟೀಲು ಮತ್ತು ಮೃದಂಗ) ಕಲಾಪ್ರಿಯರಿಗೆ ರಸದೌತಣ ನೀಡಿತು.
ಮಧ್ಯಾಹ್ನ ಊಟವಾದ ಬಳಿಕ ಸಂಜೆ ೫ ಗಂಟೆಯ ತನಕ ವಿಎಂವೇರ್ ಸಂಸ್ಥೆಯ ಕಲಾವಿದರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನೆರವೇರಿದವು. ಸಮೂಹ ಗಾನ, ಹಾಸ್ಯ ನಾಟಕ, ನೃತ್ಯ, ಸಿನಿಮಾ ಕುಣಿತ, ಮಿಮಿಕ್ರಿ, ಕನ್ನಡ ರಾಕ್ ಮ್ಯುಸಿಕ್ ಬ್ಯಾಂಡ್ ಹೀಗೆ ನಮ್ಮ ಸಂಸ್ಥೆಯ ಹತ್ತು ಹಲವಾರು ಕಲಾವಿದರು ತಮ್ಮ ಕಲೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದರು.
ಸಂಜೆ ೫ ಗಂಟೆಗೆ ಬಿಸಿಬೇಳೆಬಾತ್, ಬಜ್ಜಿ, ಹಲ್ವಾಗಳನ್ನೊಳಗೊಂಡ ಕರ್ನಾಟಕದ ವಿಶೇಷ ತಿಂಡಿಗಳನ್ನು ಎಲ್ಲರಿಗೂ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಸುಮಾರು 600 ಉದ್ಯೋಗಿಗಳು ಪ್ರತ್ಯಕ್ಷವಾಗಿಯೂ ಮತ್ತು 1450 ಜನರು ಆನ್ ಲೈನ್ ನೇರ ಪ್ರಸಾರದ ಮೂಲಕವೂ ವೀಕ್ಷಿಸಿದರು!!!
೪ನೇ ವರ್ಷದ ಈ ಅದ್ಧೂರಿಯ ಆಚರಣೆ ಮುಂದಿನ ವರ್ಷದ ಆಚರಣೆಗೆ ನಿರೀಕ್ಷೆಯನ್ನು ಇನ್ನೂ ಹೆಚ್ಚಿಸಿದಂತೂ ಸುಳ್ಳಲ್ಲ.
-ಸುಧೀಂದ್ರ ಚಡಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ